ಮನು
ಅಪರಾದದ ವೈಭವೀಕರಣ ಹೊಂದಿರುವ “ಥಗ್ಸ್ ಆಫ್ ರಾಮಘಡ” ಚಿತ್ರ ತೆರೆಗೆ ಬಂದಿದೆ. ನಿರ್ದೇಶಕ ಕಾರ್ತಿಕ್ ಮರಳಬಾವಿ ದರೋಡೆಯ ಎಳೆಗೆ ಪ್ರೀತಿ, ಸೆಂಟಿಮೆಂಟ್, ರಕ್ತಪಾತದ ಕೋಡಿ ಹರಿಸಿ ತೆರೆಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಬರಡು ಭೂಮಿಯಲ್ಲಿ ಮುದ್ದಾದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ನಿರ್ದೇಶಕರು ಹಿಂಸೆ, ರಕ್ತಪಾತಕ್ಕೆ ಆದ್ಯತೆ ನೀಡಿದ್ದಾರೆ. ಅದರ ಹೊರತಾಗಿಯೂ ಚಿತ್ರದ ಪ್ರಮುಖ ಕಲಾವಿದರಾದ ಅಶ್ವಿನಿ ಹಾಸನ್, ಚಂದನ್ ರಾಜ್, ಮಹಾಲಕ್ಷ್ಮಿ ಪಾತ್ರವನ್ನು ಜೀವಿಸಿದ್ದಾರೆ. ರಕ್ತದ ಕೋಡಿ, ಹಿಂಸೆ ಕಡಿಮೆ ಇದ್ದರೆ ಚೆನ್ನ ಎಂದು ಚಿತ್ರ ನೋಡಿದ ಪ್ರೇಕ್ಷಕರಿಗೆ ಅನ್ನಿಸಿದ್ದರೆ ಅತಿಶಯೋಕ್ತಿ ಆಗಿರಲಾರದು.
ದರೋಡೆಕೋರರು ಮತ್ತು ಕಳ್ಳರಿಂದಲೇ ತುಂಬಿರುವ ಊರು ರಾಮಘಡ. ಇಂತಹ ಊರಿಗೆ ದರೋಡೆ ಮಾಡಿಕೊಂಡು ಬರುವ ಸಮಯದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿ ಕಾರಿನಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿದ ಅರವಿಂದ( ಚಂದನ್ ರಾಜ್) ಮತ್ತವರ ತಂಡ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಅರವಿಂದನನ್ನು ಕಟ್ಟಿ ಹಾಕಿ ಒಬ್ಬರಿಗೊಬ್ಬರು ಗುಂಡು ಹಾರಿಸಿಕೊಂಡು ಸಾವನ್ನಪ್ಪುತ್ತಾರೆ.
ಸೇನೆಯಿಂದ ರಜೆ ಪಡೆದು ಗರ್ಭಿಣಿ ಪತ್ನಿ ನೋಡಲು ಬಂದ ಸ್ಯಾಮುಯಲ್( ಅಶ್ವಿನಿ ಹಾಸನ್) ಪತ್ನಿ ದರೋಡೆಕೋರರ ಕತ್ಯಕ್ಕೆ ಬಲಿಯಾಗಿದ್ದಾಳೆ ಎನ್ನುವ ಸಂಗತಿ ತಿಳಿದು ಪತ್ನಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಮಗಡಕ್ಕೆ ಬರುವ ಅರವಿಂದ ಅಲ್ಲಿ ರೇಣುಕಾ (ಮಹಾಲಕ್ಷ್ಮಿ) ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಅದೇ ಮನೆಯ ಯಜಮಾನ ಮಲ್ಲಣ್ಣನ ಸಾವಿಗೆ ತಾನೇ ಕಾರಣ ಎಂದು ತಿಳಿದು ಹುಡುಗಿಗೆ ವಿಷಯ ಹೇಳದೆ ಬಚ್ಚಿಡತ್ತಾನೆ. ಮೊದಲೇ ಆತ ಕಳ್ಳರ ಗ್ಯಾಂಗಿನ ನಾಯಕ, ಆತನ ಶಿಷ್ಯ ಎಂದು ಹೇಳಿಕೊಂಡು ದರೋಡೆ ಮುಂದುವರಿಸುತ್ತಾನೆ.
ಈ ನಡುವೆ ಸ್ಯಾಮುಯಲ್, ಹೆಂಡತಿ ಸಾವಿಗೆ ಕಾರಣರಾದವನ್ನಲ್ಲಾ ಹುಡುಕಿಕೊಂಡ ಒಬ್ಬರನ್ನೇ ಆಮಾನುಷವಾಗಿ ಹಲ್ಲೆ ನಡೆಸಿ ಸೇಡು ತೀರಿಸಿಕೊಳ್ಳುತ್ತಾನೆ. ಅರವಿಂದ ಸಿಕ್ಕ ನಂತರ ಆತನ ಮೇಲೂ ಸೇಡಿಗೆ ಹೊಂಚು ಹಾಕುತ್ತಾನೆ.ಅದು ಯಶಸ್ವಿಯಾಗುತ್ತಾ. ಅರವಿಂದ ಪೊಲೀಸರಿಂದ ಬಚಾವ್ ಆಗ್ತಾನಾ, ಇತ್ತರ ರೇಣುಕ ನಡೆ ಏನು ಎನ್ನುವುದು ಕುತೂಹಲ.
ಚಿತ್ರವನ್ನು ಕೊನೆ ತನಕ ಕುತೂಹಲದಿಂದ ನೋಡುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಾರ್ತಿಕ್, ಅತಿಯಾದ ಹಿಂಸಯನ್ನು ಕಡಿಮೆ ಮಾಡಿದ್ದರೆ ಮತ್ತಷ್ಟು ಜನರಿಗೆ ಆಪ್ತವಾಗುತ್ತಿತ್ತು.
ನಾಯಕರಾದ ಅಶ್ವಿನ್ ಹಾಸನ್, ಚಂದನ್ ರಾಜ್, ಮಹಾಲಕ್ಷ್ಮಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಚಿತ್ರರಂಗದಲ್ಲಿ ಭರವಸೆ ಹುಟ್ಟುಹಾಕಿದ್ದಾರೆ.